ನಾಲ್ಕು ಪ್ರಮುಖ ಘೋಷಣೆ: ಕಟೀಲಿಗೆ 6ನೇ ಯಕ್ಷಗಾನ ಮೇಳ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಸೆಪ್ಟೆ೦ಬರ್ 1 , 2013
|
ಯಕ್ಷಲೋಕದ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಗುರುವಾರ ನಾಲ್ಕು ಮಹತ್ವದ ಫೋಷಣೆಗಳನ್ನು ಮಾಡಲಾಗಿದೆ. ಆರನೇ ಮೇಳ ಪ್ರಾರಂಭ, ಮಳೆಗಾಲದಲ್ಲಿ ರಥಬೀದಿಯಲ್ಲಿ ಕಾಲಮಿತಿ ಯಕ್ಷಗಾನ, ವೃದ್ಧ ಸೇವಾರ್ಥಿಗಳಿಗೆ ವಿಶೇಷ ಆದ್ಯತೆ, ಒಂದು ತಿಂಗಳು ಮುಂಚಿತವಾಗಿ ತಿರುಗಾಟ ಆರಂಭದಂಥ ನಿರ್ಧಾರಕ್ಕೆ ಬರಲಾಗಿದೆ.
ಆರನೇ ಮೇಳ ಪ್ರಾರಂಭ: ಕಟೀಲಿನ ಐದು ಮೇಳಗಳಿಗೆ ಸಂಬಂಧಿಸಿದಂತೆ ಈಗಾಗಲೇ 8 ಸಾವಿರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನದ ಬುಕ್ಕಿಂಗ್ ಆಗಿದ್ದು, ಪ್ರದರ್ಶನ ಬಾಕಿ ಇದೆ. ಸೇವಾರ್ಥಿಗಳ ಒತ್ತಡ ಹಾಗೂ ಬೇಡಿಕೆಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ಆರನೇ ಮೇಳ ಪ್ರಾರಂಭ ಗೊಳ್ಳುತ್ತಿದೆ. ಇದರಿಂದ ಒತ್ತಡ ಕೊಂಚ ಕಡಿಮೆಯಾಗಲಿದೆ.
ಆರನೇ ಮೇಳಕ್ಕೆ ಸಂಬಂಧಿಸಿ ಈಗಾಗಲೇ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಮೇಳದ ಬಸ್ ಹಾಗೂ ರಂಗಸ್ಥಳವನ್ನು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಧರ್ಮ ಬೋಧಿನಿ ಚಾರಿಟೇಬಲ್ ಟ್ರಸ್ಟ್ ನೀಡಲು ಮುಂದಾಗಿದೆ. ಮೇಳದ ದೇವರ ಚಿನ್ನದ ಕಿರೀಟ, ರಜತ ಪೆಟ್ಟಿಗೆ ಸಹಿತ ಇತರ ಸಮಗ್ರ ವ್ಯವಸ್ಥೆಗಳಿಗೆ ದಾನಿಗಳು ಸ್ವಯಂ ಪ್ರೇರಣೆ ಯಿಂದ ಮುಂದಾಗಿದ್ದಾರೆ ಎಂದು ಆಡಳಿತಾಧಿಕಾರಿಗಳಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಕಾಲಮಿತಿ ಯಕ್ಷಗಾನ: ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಮೇಳಗಳು ಕಾಲಮಿತಿ ಯಕ್ಷಗಾನದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿವೆ. ಕಟೀಲಿನಲ್ಲಿ ಕಾಲಮಿತಿ ಯಕ್ಷಗಾನಕ್ಕಾಗಿಯೇ ಪ್ರತ್ಯೇಕ ಸೀಸನ್ ಪ್ರಾರಂಭಿಸ ಲಾಗಿದ್ದು, ಮಳೆಗಾಲದಲ್ಲಿ ಅಂದರೆ ಮೇ 26ರಿಂದ ಅಕ್ಟೋಬರ್ 4ರವರೆಗೆ ಕಟೀಲು ದೇವಳದ ರಥಬೀದಿಯಲ್ಲಿ ಮಾತ್ರ ಸಂಜೆ 6ರಿಂದ ರಾತ್ರಿ 12 ಗಂಟೆ ಯವರೆಗೆ ಕಾಲಮಿತಿ ಯಕ್ಷಗಾನ ನಡೆಸುವ ಬಗ್ಗೆ ಗುರುವಾರ ನಡೆದ ವಿಶೇಷ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಗಿದೆ. ಆದರೆ ಕಾಲಮಿತಿ ಯಕ್ಷ ಗಾನದ ಕಲಾವಿದರು ಹಾಗೂ ಮೇಳದ ಸರದಿ ಆವೃತ್ತಿ ಬಗೆಗೆ ಇನ್ನೂ ರೂಪು ರೇಷೆ ಅಂತಿಮಗೊಂಡಿಲ್ಲ. 132 ಕಾಲಮಿತಿ ಯಕ್ಷಗಾನ ನಡೆಸಬಹುದಾಗಿದೆ.
ಈಗಾಗಲೇ ಯಕ್ಷಗಾನ ಬುಕ್ಕಿಂಗ್ ಮಾಡಿರುವ ಸೇವಾರ್ಥಿಗಳಲ್ಲಿ 60 ವರ್ಷ ದಾಟಿದ ಸೇವಾರ್ಥಿಗಳಿಗೆ ತಮ್ಮ ಸೇವೆಯನ್ನು ಪೂರೈಸಲು ಈ ವರ್ಷ ಆದ್ಯತೆ ನೀಡಿ ಪ್ರದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಪರಿಗಣಿಸಲಾಗುವುದು ಎಂಬುದು ಯಕ್ಷಗಾನ ಕಲಾವಿದರೂ ಆಗಿರುವ ಕ್ಷೇತ್ರದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರ ಅಭಿಪ್ರಾಯ.
ಅಲ್ಲದೆ ಈ ಬಾರಿ ಒಂದು ತಿಂಗಳು ಮುಂಚಿತವಾಗಿ ಅಂದರೆ ಅಶ್ವಿಜ ಶುದ್ಧ ಬಹುಳ ಪಂಚಮಿಯಂದು ಅಂದರೆ ನವೆಂಬರ್ 7ರಂದು ಎಲ್ಲ ಆರೂ ಮೇಳಗಳು ತಿರುಗಾಟ ಪ್ರಾರಂಭಿಸುವುದರಿಂದ ಎಲ್ಲ ಆರು ಮೇಳಗಳಿಗೆ ತಲಾ 22 ಪ್ರದರ್ಶನ ಹೆಚ್ಚುವರಿಯಾಗಿ ಸಿಗಲಿದೆ.
ಈಗಾಗಲೇ 8 ಸಾವಿರ ಯಕ್ಷಗಾನ ಪ್ರದರ್ಶನ ಬುಕ್ಕಿಂಗ್ ಆಗಿದೆ, ಮುಂದಿನ ತಿರುಗಾಟದಲ್ಲಿ 1332 ಪ್ರದರ್ಶನ ಇದೆ. ಮಳೆಗಾಲದಲ್ಲಿ 132 ಪ್ರದರ್ಶನವಿರುತ್ತದೆ. ಶಾಶ್ವತ ಯಕ್ಷಗಾನದ ಸಂಖ್ಯೆ 450.
330 ಕಲಾವಿದರು ಹಾಗೂ ಇತರ ಸಿಬ್ಬಂದಿ ಇದ್ದಾರೆ. 23 ಲಕ್ಷ ರೂ. ಪ್ರಸ್ತುತ ರಜೆಯ ಸಂಬಳ ನೀಡಲಾಗುತ್ತಿದೆ. ವಿಮೆ, ಕ್ಷೇಮನಿಧಿ, ಆರೋಗ್ಯ ವಿಮೆ, ಪಿಎಫ್ ಸೌಲಭ್ಯವಿದೆ.
-
"ಹೌದು ಮೇಳಗಳ ತಿರುಗಾಟದ ಆರಂಭದ ದಿನ ಎಲ್ಲ ಆರು ರಂಗಸ್ಥಳಗಳಲ್ಲೂ ಏಕ ಕಾಲದಲ್ಲಿ ಯಕ್ಷ ಸಂಭ್ರಮಕ್ಕೆ ಕಾಯುತ್ತಿದ್ದಾರೆ ಯಕ್ಷಾಭಿಮಾನಿಗಳು. ಯಕ್ಷಗಾನ ಸೇವಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಸೇವೆಗಳನ್ನು ಕ್ಷಿಪ್ರವಾಗಿ ಪೂರೈಸಲು ಈ ಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಮೇಳಗಳ ತಿರುಗಾಟ ಆರಂಭಕ್ಕೆ ಮುನ್ನ ಸಮಗ್ರ ರೂಪುರೇಷೆ ಅಂತಿಮಗೊಳಿಸಲಾಗುವುದು. ಕಟೀಲಿನಲ್ಲಿ ಮೇಳದ ನಿರ್ವಹಣೆಗೆ ಯಾವುದೇ ರೀತಿಯಲ್ಲಿ ಹೆಚ್ಚುವರಿ ಹೊರೆ ಆಗುವುದಿಲ್ಲ." - ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಡಳಿತಾಧಿಕಾರಿ, ಕಟೀಲು ದೇವಸ್ಥಾನ
-
"ಸಂಪ್ರದಾಯ, ಭಕ್ತರ ಅಪೇಕ್ಷೆಗೆ ವಿರುದ್ಧವಾಗದಂತೆ ಬದಲಾವಣೆಗಳು ಸ್ವಾಗತಾರ್ಹ. ಕಡಿಮೆ ಅಂತರದಲ್ಲಿ ಹೆಚ್ಚು ಸೇವಾರ್ಥಿಗಳ ಯಕ್ಷಗಾನ ಸೇವೆ ಪೂರೈಸುವಂತಾದರೆ ಉತ್ತಮ" - ವಾಸುದೇವ ಅಸ್ರಣ್ಣ ಅನುವಂಶಿಕ ಮೊಕ್ತೇಸರರು
|
|
|